Monday, April 20, 2015

ದೃಷ್ಟಿಯ ದೃಷ್ಟಿಕೋನ


ನನಗೆ ಕೀಚೈನುಗಳನ್ನು ಕಲೆ ಹಾಕುವ ಒಂದು ಹವ್ಯಾಸವಿದೆ. ಗಾಂಧಿಬಜಾರಿಂದ ಹಿಡಿದು,ಜಯನಗರ,ಮಲ್ಲೇಶ್ವರ, ವಿಜಯನಗರ, ಇವೇ ಮುಂತಾದ ಜಾಗಗಳಲ್ಲಿ ನಾನು ಅವ್ಯಾಹತವಾಗಿ ಓಡಾಡುವ ಕಾರಣ ನನ್ನ ಕೀಚೈನಿನ ಕಲೆಕ್ಷನ್ನು ಅವಿರತವಾಗಿ ನಡೆದುಕೊಂಡು ಬಂದಿದೆ. ನಾನು ಎಮ್.ಫಿಲ್ ಮಾಡುತ್ತಿದ್ದ ಕಾಲ.[೨೦೧೧]  ಲ್ಯಾಬಲ್ಲಿ ನನ್ನ ಪ್ರಯೋಗ ಸತತ ಹದಿನಾಲ್ಕನೇ ಬಾರಿ ಕೈಕೊಟ್ಟ ಶುಭಸಂದರ್ಭದಲ್ಲಿ, ನಾನು ಬೇರೇನೂ ಮಾಡಲು ತೋಚದೆ ಲ್ಯಾಬಿಂದ ಹೊರಬಿದ್ದು ಜಯನಗರದಲ್ಲಿ ಬೀದಿಗಳಲ್ಲಿ ಒಂದು ಸುತ್ತು ಹಾಕಿದೆ. ಯಥಾಪ್ರಕಾರ ಸೀರೆ, ಚಿನ್ನ, ಕಾರು ಇವೇ ಮುಂತಾದವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಹೊಸ ಸೀರೆಯ ಡಿಸೈನು,  ಚಿನ್ನದ ಹೊಸ ಪ್ಯಾಟರ್ನು, ಮತ್ತು ಆ ಕ್ಷಣದ ಚಿನ್ನದ ರೇಟು, ಹೊಸ ಕಾರುಗಳ ಸಾಧಕ ಬಾಧಕಗಳು, ಇವೇ ಮುಂತಾದ ವಿಷಯಗಳ ಬಗ್ಗೆ ಯೋಚನೆ ಮಾಡುತ್ತಾ,  ಜಯನಗರ ಮಾರ್ಕೆಟ್ಟನ್ನು ದಾಟಿ, ಕೀಚೈನು ದೊರೆಯುವ ಅಂಗಡಿಯ ಬಳಿ ಬಂದು ನಿಂತೆ, ಹೊಸ ಮಾದರಿಯ ಕೀಚೈನು ಕಂಡರೆ ಅದನ್ನು ಕೊಂಡುಕೊಳ್ಳಲು. ಅಲ್ಲಿ ನನ್ನ ಕಣ್ಣಿಗೆ ಒಂದು ವಿಚಿತ್ರ ವಸ್ತು ಕಾಣಿಸಿತು. ಒಂದು ನಿಂಬೆಹಣ್ಣು ಮತ್ತು ನಾಲ್ಕು ಮೆಣಸಿನಕಾಯನ್ನು ಪ್ಲಾಸ್ಟಿಕ್ ನಲ್ಲಿ ಮಾಡಿ, ಕಾರುಗಳಿಗೆ ಮತ್ತು ಆಫೀಸುಗಳ ಮುಂದೆ ನೇತುಹಾಕಲು ಅನುಕೂಲವಾಗುವಂತೆ ದಾರವನ್ನು ಇಳಿಬಿಡಲಾಗಿತ್ತು. ದೂರದಿಂದ ನಿಜವಾದದ್ದೇನೋ ಅನ್ನಿಸುತ್ತಿತ್ತು. ನಾನು ಅದನ್ನು ಸ್ವಲ್ಪ ತೀಕ್ಷ್ಣವಾಗಿ ನೋಡುತ್ತಿದ್ದುದನ್ನು ಗಮನಿಸಿದ ಅಂಗಡಿಯ ಮಾಲೀಕರು, "ಮೇಡಂ, ದೃಷ್ಟಿ ಪರಿಹಾರ ಆಗತ್ತೆ. ವಾರ ವಾರಕ್ಕೆ ನಿಂಬೇಹಣ್ಣು ಮೆಣಸಿನಕಾಯಿ ಬದಲಿಸುವ ಕೆಲಸ ತಪ್ಪತ್ತೆ.ತಗೊಳ್ಳಿ" ಅಂದರು.ನಾನು "ಬರಿ ಅವುಗಳ ಬಣ್ಣದಿಂದ ದೃಷ್ಟಿ ಪರಿಹಾರ ಆಗಲ್ಲ ಬಿಡಿ" ಎಂದು ಬರಿಗೈಯಲ್ಲಿ ಹಾಗೇ ಮುನ್ನಡೆದೆ. ದೃಷ್ಟಿ, ನಂಬಿಕೆ,ಮೂಢನಂಬಿಕೆ ಮತ್ತು ವಿಜ್ಞಾನಕ್ಕೆ ನನ್ನದೇ ರೀತಿಯ ತರ್ಕಬದ್ಧ ಸಂಬಂಧವನ್ನು ಯೋಚಿಸುತ್ತಾ.

ಕೆಲವು ಆಚರಣೆಗಳಿಗೆ ವೈಜ್ಞಾನಿಕ ಪುರಾವೆ ಇದೆ. ಇನ್ನು ಕೆಲವಕ್ಕೆ ನಾನು ಇನ್ನು ಸಾಕ್ಷಿಗಳ ಹುಡುಕಾಟದಲ್ಲಿ ತೊಡಗಿದ್ದೇನೆ. ನೀವು ಆ ಹುಡುಕಾಟದಲ್ಲಿ ನನ್ನ ಸಹಾಯಕ್ಕೆ ಬರುವಿರಿ ಎಂದು ಭಾವಿಸಿ, ನನ್ನ ತರ್ಕವನ್ನು ಇಲ್ಲಿ ಮಂಡಿಸುತ್ತಿದ್ದೇನೆ.ನನ್ನ ಆಲೋಚನಾ ಶಕ್ತಿಗೆ ಹೊಳೆದದ್ದಿಷ್ಟು.

ಮೊದಲು ಈ ದೃಷ್ಟಿ ಎಂದರೇನು ಎಂಬುದಕ್ಕೆ ಒಂದು ವಾದ ಇರಬೇಕು ಅನ್ನಿಸಿತು. ಪ್ರಪಂಚದ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ನಾದ ಮತ್ತು ತರಂಗ ಇರುತ್ತದೆ. (wave, vibration, frequency).ಎಲ್ಲರಿಗೂ ತಿಳಿದಿರುವಂತೆ ನಮ್ಮ ಪ್ರಪಂಚದ ತುಂಬೆಲ್ಲಾ electromagnetic ತರಂಗಗಳಿವೆ. ನಮಗೆ ಗೋಚರಿಸುವ ಬೆಳಕು ಕೂಡಾ ಈ ತರಂಗಗಳ ಒಂದು ಭಾಗವೇ. ಈ ಪ್ರಪಂಚದಲ್ಲಿನ ಸಕಲ ವಸ್ತುಗಳು electromagnetic spectrum ನಲ್ಲಿನ ಕೆಲ ತರಂಗಗಳನ್ನು ಸ್ವೀಕರಿಸಿ ಮಿಕ್ಕವುಗಳನ್ನು ಪ್ರತಿಫಲಿಸುತ್ತವೆ. ವಸ್ತುಗಳ ಬಣ್ಣಗಳ ಹಿಂದಿರುವ ಕಾರಣ ಇದೇ.ಕಪ್ಪು ಎಲ್ಲ ತರಂಗಗಗಳನ್ನು ತನ್ನೊಳಗೆ ಹೀರಿದರೆ, ಬಿಳುಪು ಎಲ್ಲ ಬಣ್ಣಗಳನ್ನು ಪ್ರತಿಫಲಿಸುತ್ತದೆ.ನಮ್ಮ ದೇಹ ಬಿಸಿ ಇರುವ ಕಾರಣ infra red ತರಂಗಗಳನ್ನು ಹೊರಹೊಮ್ಮಿಸುತ್ತದೆ. (Night shot photography ಮಾಡಿರುವವರಿಗೆ ಪ್ರಾಯಶಃ ಇದರ ಬಗ್ಗೆ ಹೆಚ್ಚು ತಿಳಿದಿರುತ್ತದೆ.)

ನಮ್ಮ ಭಾವನೆಗಳು, ಕ್ರಿಯೆ ಪ್ರತಿಕ್ರಿಯೆಗಳು ಮತ್ತು ವರ್ತನೆಗಳು ಬದಲಾಗುತ್ತಾ ಹೋದಾಗ ನಮ್ಮ ದೇಹದ ತಾಪಮಾನದಲ್ಲಿ ಸ್ವಲ್ಪ ಏರು ಪೇರಾಗುತ್ತದೆ. ಉದಾಹರಣೆಗೆ ನಮಗೆ ಕೋಪ ಬಂದಾಗ ನಮ್ಮ ದೇಹ ಬಿಸಿಯಾಗುತ್ತದೆ. ಆಸೆ, ಅಸೂಯೆ ಮತ್ತು "ಅಯ್ಯೋ, ಇದು ನಮ್ಮ ಪಾಲಿಗಿಲ್ಲವಲ್ಲ"ಎಂದು ಜನ ಹಲುಬಿದಾಗ ಅವರ ದೇಹದ ತರಂಗಗಳಲ್ಲಿ ಉಂಟಾಗುವ ಏರುಪೇರು infra red ತರಂಗಗಳಾಗಿ  ಸ್ವಲ್ಪ ಹೆಚ್ಚು ಬಲವಾಗಿ ಇತರರಿಗೂ ರವಾನಿಸಲ್ಪಡುತ್ತವೆ. ನಮಗರಿವಿಲ್ಲದೆಯೇ ಈ ತರಹದ ಏರುಪೇರುಗಳು ನಮ್ಮ ದೇಹದಲ್ಲಿ ನಿರಂತರವಾಗಿ ಆಗುತ್ತಿರುತ್ತದೆ. ಆದರೆ ಇದರ ಪರಿಣಾಮ ನಮ್ಮ ಅರಿವಿಗೆ ಬರುತ್ತದೆ. ಹೀಗೆ ಹಲುಬುವವರಿಂದ ಹೊರಟ ತರಂಗ ನಮಗೆ ತಲುಪಿ ದೇಹದ ತಾಪಮಾನ ಸ್ವಲ್ಪ ಮಟ್ಟಿಗೆ ಏರಿ ನಮಗೆ ಕಿರಿಕಿರಿಯಾಗಬೇಕು.ದೃಷ್ಟಿ ತಾಗುವುದೆಂದರೇ ಇದೇ ಇರಬೇಕು.

ದೃಷ್ಟಿ ತಾಗುವುದು ಎಂದರೆ ಇದೇ ಆದರೆ, ನಮ್ಮ ಮುಂದಿನ ಪ್ರಶ್ನೆ ದೃಷ್ಟಿ ನಿವಾರಣೆ ಎಂದರೇನು ಎಂಬುದಾಗಿರುತ್ತದೆ. ಹೇಗೂ ಯೋಚನೆ ಮಾಡಕ್ಕೆ ಶುರು ಮಾಡಿದ್ದಾಗಿತ್ತಲ್ಲ, ಈ ಪ್ರಶ್ನೆಗೂ ಉತ್ತರ ಯೋಚನೆ ಮಾಡುವುದನ್ನು ಮುಂದುವರೆಸಿದೆ. ಎಲ್ಲ electromagnetic ತರಂಗಗಳನ್ನು ಹೀರಬಲ್ಲ ಶಕ್ತಿ ಕಪ್ಪು ಬಣ್ಣಕ್ಕೆ ಇದೆ. ಭೌತಶಾಸ್ತ್ರದಲ್ಲಿ ನಾವು ಕಪ್ಪುಬಣ್ಣಕ್ಕೆ, ಕೃಷ್ಣಕಾಯಗಳಿಗೆ(black body) ವಿಶೇಷವಾದ ಸ್ಥಾನಮಾನವನ್ನು ಕೊಟ್ಟಿದ್ದೇವೆ. ಹಾಗಾಗಿ ದೃಷ್ಟಿ ನಿವಾರಿಸಲು ಪೊರಕೆಗೆ ಬೆಂಕಿ ಹಚ್ಚಿ, ಅಪ್ರದಕ್ಷಿಣವಾಗಿ ನೀವಾಳಿಸಿ ಹೊತ್ತಿಸಲಾಗುತ್ತದೆ.[ಶುಭಕ್ಕೆ ಪ್ರದಕ್ಷಿಣೆ, ಅಶುಭಕ್ಕೆ ಪ್ರದಕ್ಷಿಣೆ ಅನ್ನೋದು ಶಾಸ್ತ್ರವಂತೆ...ವೈಜ್ಞಾನಿಕವಾಗಿ ಈ ರೀತಿಯ ನಿಬಂಧನೆಗಳೇನೂ ಇಲ್ಲ] ಪೊರಕೆ ಬೇಗ ಸುಟ್ಟು ಕಪ್ಪಾದಷ್ಟು ದೃಷ್ಟಿ ಹೆಚ್ಚುತಾಗಿದೆಯಂತೆ ![ಪೊರಕೆ ಸುಡುವುದು ಮುಖ್ಯವೇ ಹೊರತು ಅದು ಎಷ್ಟು ಬೇಗ ಸುಡುತ್ತದೆ ಅನ್ನೋದು ಅಲ್ಲ ] ಆನಂತರ  ಕರಿಯನ್ನು ಹಣೆಯ ಎಡಭಾಗ, ಎಡಗೈ ಮತ್ತು ಎಡಗಾಲಿಗೆ ಇಡಲಾಗುತ್ತದೆ.[ಶುಭಕ್ಕೆ ಬಲ, ಅಶುಭಕ್ಕೆ ಎಡ ಅನ್ನೋದು  ಶಾಸ್ತ್ರವೇ ಹೊರತು ಇದಕ್ಕೆ ವೈಜ್ಞಾನಿಕ ಪುರಾವೆ ಸಿಕ್ಕಿಲ್ಲ] ಸುಲಭವಾಗಿ ಸುಡಬಲ್ಲ ವಸ್ತುಗಳನ್ನು ಕೃಷ್ಣಕಾಯಗಳನ್ನಾಗಿ ಪರಿವರ್ತಿಸಿ ದೃಷ್ಟಿತೆಗೆಯುವ ಈ ಪದ್ಧತಿ, ಕಪ್ಪು ಬಣ್ಣ ನಮಗೆ ತಲುಪಿರುವ ಹೆಚ್ಚುವರಿ  infra red  ತರಂಗಗಳನ್ನು ಹೀರುತ್ತದೆ ಎಂಬುದು ನಮ್ಮ ಪೂರ್ವಿಕರಿಗೆ ಮುಂಚೆಯೇ ಗೊತ್ತಿತ್ತೇ?

ಉಪ್ಪು ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ನಮ್ಮೊಂದಿಗೆ ಒಂದಲ್ಲಾ  ಒಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತಲೇ ಇರುತ್ತದೆ. ಸಾಮಾನ್ಯವಾಗಿ ದೃಷ್ಟಿ ತಾಗಿದೆ ಎಂದರೆ ಹರಳುಪ್ಪನ್ನು ಅಪ್ರದಕ್ಷಿಣವಾಗಿ ನೀವಾಳಿಸಿ ನೀರಲ್ಲಿ ನೆನೆಸಲಾಗುತ್ತದೆ. ಉಪ್ಪು ಬೇಗ ಕರಗಿದರೆ ಹೆಚ್ಚು ದೃಷ್ಟಿ ತಾಗಿದೆ ಎಂದು ಭಾವಿಸಲಾಗುತ್ತದೆ. ಉಪ್ಪು ನೀರಲ್ಲಿ ಕರಗುವುದಕ್ಕೆ ಶಾಖದ ಅವಶ್ಯಕತೆ ಇರುತ್ತದೆ. ಆ ಶಾಖವನ್ನು ಈ ತರಂಗಗಳು ಒದಗಿಸುತ್ತವೆ ಎಂದು ತರ್ಕಿಸಬಹುದು. ಉಪ್ಪು infrared  ತರಂಗಗಳನ್ನು ಹೀರುವಲ್ಲಿ ಎತ್ತಿದ ಕೈ ! ನಾನು ಚಿಕ್ಕವಯಸ್ಸಿನಿಂದ ನಮ್ಮ ಅಜ್ಜಿ-ತಾತ ಅಪ್ಪ ಅಮ್ಮನ್ನ ಪೀಡಿಸಿ ಕೇಳುತ್ತಿದ್ದ ಪ್ರಶ್ನೆಗೆ  ಉತ್ತರ ಸಿಕ್ಕಿತು. ಆದರೆ ಕುಂಬಳಕಾಯಿ ಕಟ್ಟುವ ಮತ್ತು ನೆಟ್ಟಿಕೆ ಮುರಿದು ದೃಷ್ಟಿ ತೆಗೆಯುವ ಹಿಂದಿರುವ ವೈಜ್ಞಾನಿಕ ತರ್ಕ ನನಗೆ ಇನ್ನೂ ಹುಡುಕಲಾಗಿಲ್ಲ.

ಇನ್ನು ನಿಂಬೆಹಣ್ಣಿನ ವಿಷಯ. ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳು ಮೂಲಭೂತವಾಗಿ ಆಮ್ಲದ ವಸ್ತುಗಳು(acidic).ಇವು infra red ತರಂಗಗಳನ್ನು ಹೀರುವಲ್ಲಿ ಸಕ್ಷಮ. ಗೋಲ ವಸ್ತುವಾದ ನಿಂಬೇಹಣ್ಣು, ಸ್ವಲ್ಪ ಚೂಪಾದ ಮೆಣಸಿನಕಾಯಿ ಎರಡನ್ನೂ ಸುಟ್ಟರೆ ಎಲ್ಲಾ ಕೋನಗಳಿಂದಲೂ ಅದು ತರಂಗಳನ್ನು ಸಮರ್ಪಕವಾಗಿ ಹೀರಬಲ್ಲುದು ಎಂದು ತರ್ಕ ಮಾಡಬಹುದು.ಆದರೆ ನಿಂಬೇಹಣ್ಣು ಮತ್ತು ಮೆಣಸಿನಕಾಯಿ ಎರಡೂ ಕಪ್ಪಗಿರಬೇಕಾದದ್ದು ಗಮನಾರ್ಹ. ಅದು ಬಿಟ್ಟು ಕಪ್ಪೇ ಆಗಿರದ, ತರಂಗಗಳನ್ನು ಹೀರಬಲ್ಲ ಆಮ್ಲದ ಅಂಶರಹಿತ ಪ್ಲಾಸ್ಟಿಕ್ ನಿಂಬೇಹಣ್ಣು ಮತ್ತು ಮೆಣಸಿನಕಾಯಿ ನೇತುಹಾಕುವುದರಿಂದ ಆಗುವ ಪ್ರಯೋಜನವಾದರೂ ಏನು ?

ದೃಷ್ಟಿ ಸಿದ್ಧಾಂತವನ್ನು ನಂಬದೆಯೇ ಇರುವವರಲ್ಲಿ ನಾನೂ ಒಬ್ಬಳಾಗಿದ್ದೆ. ಆಚರಣೆಗಳಿಗೆ ವೈಜ್ಞಾನಿಕ ವಿವರಣೆಯನ್ನು ಹುಡುಕುತ್ತಾ ಸಾಗುವಾಗ ನನಗೆ logical and scientific ಅನಿಸುವ ಪದ್ಧತಿ/ಶಾಸ್ತ್ರ ಮತ್ತು ಸಂಪ್ರದಾಯಗಳನ್ನು ನಂಬಲು ಪ್ರಾರಂಭಿಸಿದೆ.ಒಂದು ವಿಷಯದ  ಅಥವಾ ಒಂದು ಆಚರಣೆಯ ಪೂರ್ವಾಪರ ತಿಳಿಯದೇ ಬರಿಯ ಢಂಭಾಚರಣೆ ಮಾಡುವುದು ಎಷ್ಟು ಸಾಧು ?  ಅಥವಾ ಬೇರೆಯವರನ್ನು ತೃಪ್ತಿಪಡಿಸಲೋ, ನಾವೂ ಮಹಾ ಆಚಾರವಂತರು ಎಂದು ತೋರಿಸಿಕೊಳ್ಳಲೋ ಮಾಡುವ ಆಚರಣೆಯ ಔಚಿತ್ಯ ಮತ್ತು ಸಾರ್ಥಕತೆ ಏನು? ನಿಂಬೆಹಣ್ಣು ಮತ್ತು ಮೆಣಸಿನಕಾಯಿ ದುಬಾರಿ ಎನಿಸಿದರೆ  ಉಪ್ಪಿಲ್ಲವೆ ?  ಅದಕ್ಕೆ ಪ್ಲಾಸ್ಟಿಕ್ ನಿಂಬೇಹಣ್ಣು ಬೇಕೆ ? 

ನಾವೇಕೆ ಹೀಗೆ ?!



Tuesday, December 16, 2014

ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ...

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಉಗ್ರರ ಅಟ್ಟಹಾಸ ಈ ಮೇಲಿನ ವಾಕ್ಯದ ಉದಾಹರಣೆಯಾಗಬಹುದೇನೋ.ಹಿಂಸೆಗೆ ಹಾಲೆರೆದು ಈಗ ಪಾಕಿಸ್ತಾನಕ್ಕೆ ದೊರೆತ ಫಲವೇನು ? ಮುಗ್ಧ ಕಂದಮ್ಮಗಳಿಗೆ ಜಿಹಾದ್ ಗೊತ್ತಿದೆಯೇ ? ಅವೇನು ಮಾಡಿದ್ದವು ಪಾಪ..ಗುಂಡೇಟಿಗೆ ಬಲಿಯಾಗಲು ?

ನಿನ್ನೆ ಆಸ್ಟ್ರೇಲಿಯಾ, ಇಂದು ಪಾಕಿಸ್ತಾನ, ನಾಳೆ ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ತೂಗುಬಿಟ್ಟಿವೆ ಮೀಡಿಯಾ..
ಈ ಬರ್ಬರತೆ ಇಲ್ಲಷ್ಟೇ ಅಲ್ಲ...ಎಲ್ಲೇ ಆದರೂ ಖಂಡನೀಯ. ಈಗಲಾದರೂ ಜಗತ್ತು ರಾಜಕೀಯ ಮರೆತು ಒಂದಾಗಿ ನಿಂತು ಭಯೋತ್ಪಾದನೆ ಎಂಬ ಈ ಮಹಾಮಾರಿಯನ್ನು ಪ್ರಪಂಚದಿಂದ ಕಿತ್ತೊಗೆಯಲಿ ಎಂದು ಆಶಿಸೋಣ. ಮುಗ್ಧ ಆತ್ಮಗಳಿಗೆ ಶಾಂತಿ ಕೋರುತ್ತಾ...

Wednesday, December 15, 2010

ಪ್ರಣತಿಯಿಂದ ಪ್ರಬಂಧ ಸ್ಪರ್ಧೆ




ಪ್ರಬಂಧ ಸ್ಪರ್ಧೆ

ಸಾಹಿತ್ಯ, ಸಂಸ್ಕೃತಿ, ಪ್ರಕೃತಿ -ಅಂಶಗಳನ್ನು ಧ್ಯೇಯವಾಗಿಸಿಕೊಂಡಿರುವ ಸಂಸ್ಥೆ ‘ಪ್ರಣತಿ’, ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ. ವಿದ್ಯಾರ್ಥಿಗಳು ‘ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’ ಎಂಬ ವಿಷಯದ ಮೇಲೆ ೨೦೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಸ್ಫುಟವಾದ ಕೈಬರಹದಲ್ಲಿ ಅಥವಾ ಡಿ.ಟಿ.ಪಿ. ಮಾಡಿ ಕಳುಹಿಸಬಹುದು. ಪ್ರಬಂಧದ ಜೊತೆ ನಿಮ್ಮ ಕಾಲೇಜ್ ಐಡೆಂಟಿಟಿ ಕಾರ್ಡ್‌ನ ಪ್ರತಿ ಇರಿಸುವುದು ಕಡ್ಡಾಯ. ಸಂಪಾದಕ ಮಂಡಲಿ ಮತ್ತು ವಿಷಯ ತಜ್ಞರು ಆಯ್ದ ಪ್ರಬಂಧಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಪ್ರಬಂಧವನ್ನು ಈ ವಿಳಾಸಕ್ಕೆ ಕಳುಹಿಸಬಹುದು ಅಥವಾ ಇ-ಮೇಲ್ ಮಾಡಬಹುದು. ಕೊನೆಯ ದಿನಾಂಕ: ೩೦ ಡಿಸೆಂಬರ್ ೨೦೧೦. ವಿಳಾಸ: ಪ್ರಣತಿ, ನಂ. ೪೪೮/ಎ, ೮ನೇ ಮೇನ್, ೭ನೇ ಕ್ರಾಸ್, ತ.ರಾ.ಸು. ರಸ್ತೆ, ಹನುಮಂತನಗರ, ಬೆಂಗಳೂರು - ೫೬೦ ೦೧೯. ಇ-ಮೇಲ್: prabandha@pranati.in. ಯಾವುದೇ ಮಾಹಿತಿಗೆ: ೯೬೧೧೪೫೮೬೯೮ / ೯೯೮೦೦೨೨೫೪೮

Sunday, February 21, 2010

ಸಧ್ಯ ಕರೆಂಟು ಹೋಯ್ತು !

ಟೈಟಲ್ ನೋಡಿದ ತಕ್ಷಣ ನನಗೇನಾಗಿದೆ ಅಂತ ನೀವು ಯೋಚಿಸೋದು ಸಹಜ. ಪರೀಕ್ಷೆಯ ಈ ಸಮಯದಲ್ಲಿ ಕರೆಂಟಿಲ್ಲದೇ, ಮಕ್ಕಳೆಲ್ಲ ಓದಲಾಗದೇ ಪರದಾಡುತ್ತಿರುವಾಗ, ಸಧ್ಯ ಕರೆಂಟು ಹೋಯ್ತು ಅಂತ ಉದ್ಗರಿಸುತ್ತಿದ್ದಾಳಲ್ಲಾ, ಇವಳೇಕೆ ಹೀಗೆ ಅಂತ ನೀವು ಪ್ರಶ್ನೆ ಕೇಳುವುದರಲ್ಲಿಯೂ ಖಂಡಿತಾ ಆಶ್ಚರ್ಯ ಇಲ್ಲ. ಆದರೆ ಹೀಗೆ ಉದ್ಗರಿಸಿದ್ದು ನಾನಲ್ಲ.

ನಾನಲ್ಲದಿದ್ದರೆ ಇನ್ಯಾರು ಹೀಗೆ ಉದ್ಗರಿಸಿದ್ದು ? ಯಾರದು ? ಅಂತ ಪ್ರಶ್ನೆ ಕೇಳಿ ನಿಮ್ಮ ಕುತೂಹಲ ಕೆರಳಿಸಲು ನಾನು ಬೆಳೆಗೆರೆಯ ಹಾಗೆ ಕ್ರೈಂ ಡೈರಿ ನಡೆಸಿಕೊಡುತ್ತಿಲ್ಲ. ಇದು ಒಂದು ಕಥೆಯೇ, ಕ್ರೈಂ ಇಲ್ಲದ ಕಥೆ. ತಾಳಿ ತಾಳಿ, ಇದು ಲವ್ ಸ್ಟೋರಿ ಅಂತ ಹೇಳ್ಬೇಡಿ. ಲವ್ ಸ್ಟೋರಿಯೂ ಅಲ್ಲ, ಟ್ರಾಜಿಡಿಯೂ ಅಲ್ಲ. ವಿಡಂಬನೆ, ವಿಪರ್ಯಾಸ.

ಈ ಕಥೆಯ ಕಥೆಗಾರ್ತಿ ನಾನಲ್ಲ. ಈ ವಿಷಯವನ್ನ ಹೇಳಿದ್ದು ನನ್ನ ಹಿರಿಯ ಸೋದರಿ. ಇದು ಅವರ ಅನುಭವಕ್ಕೆ ಬಂದ ವಿಷಯ. ಅವರು ನನ್ನ ಹತ್ತಿರ ಎಲ್ಲವನ್ನೂ ಸವಿಸ್ತಾರವಾಗಿ ಹೇಳಿ, "ನೀನು ಇದನ್ನ ಬ್ಲಾಗಿಗೆ ಹಾಕು. ನಿನ್ನ ಮೂಲಕ ಇದು ಹೆಚ್ಚು ಜನಕ್ಕೆ ತಲುಪಲಿ" ಅಂದರು. ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಮಿಕ್ಕಿದ್ದು ನಿಮಗೆ ಬಿಟ್ಟಿದ್ದು.

ನಮ್ಮಕ್ಕ ಮತ್ತು ಅವರ ಕುಟುಂಬ ಅವರ ಗೆಳೆಯರೊಬ್ಬರ ಮನೆಗೆ ಯಾವುದೋ get together ಗಾಗಿ ಭೇಟಿ ನೀಡಿದ್ದ ಸಂದರ್ಭ. ಮನೆಯ ಕಲಶವೇ ಮೂರ್ಖರ ಪೆಟ್ಟಿಗೆಯಲ್ಲವೇ ? ಯಾತಕ್ಕೆ ಸೇರಿದ್ದೇವೆ ಎಂಬುದನ್ನೇ ಮರೆತ ಮಹಾಶಯರೆಲ್ಲರೂ ಮೂರ್ಖರ ಪೆಟ್ಟಿಗೆ ಮುಂದೆ ಸ್ಥಾಪಿತರಾದರು. ಎಂಥದ್ದೋ "ಚೆನ್ನಾಗಿರೋ" ಕಾರ್ಯಕ್ರಮ ಬರುತ್ತಿದ್ದಿರಬೇಕು, ಎಲ್ಲರೂ ತದೇಕಚಿತ್ತದಿಂದ ನೋಡುತ್ತಾ, ತಟ್ಟೆಯಲ್ಲಿದ್ದ ತಿಂಡಿಯನ್ನು ತಿನ್ನುತ್ತಿದ್ದರು. ಮಧ್ಯದಲ್ಲಿ ಕರೆಂಟು ಹೋಯ್ತು. ಎಲ್ಲರೂ " ಛೆ ! ಕರೆಂಟು ಹೋಯ್ತು !" ಎಂದು ಉದ್ಗರಿಸಿದರೆ ಒಂದು ಕ್ಷೀಣ ದನಿ "ಸಧ್ಯ ಕರೆಂಟು ಹೋಯ್ತು !" ಎಂದು ಉದ್ಗರಿಸಿತು. ಆಶ್ಚರ್ಯದಿಂದ ತಿರುಗಿ ನೋಡಿದರೆ ಧ್ವನಿ ಬಂದಿದ್ದು ಒಬ್ಬ ಪುಟ್ಟ ಬಾಲಕನಿಂದ. ಆತ, ಆ ಮನೆಯ ಮಗ. Mentally challenged (ಮನೋ ವಿಕಲ ಎಂಬ ಪದ ಬಳಸಲು ಮನಸ್ಸೊಪ್ಪುತ್ತಿಲ್ಲ. ಆಂಗ್ಲದಲ್ಲಿ ಬರೆದಿರುವುದು ಲೋಕ ಅವನಿಗೆ ಕೊಟ್ಟ ಬಿರುದು) ಹುಡುಗನಂತೆ ಆತ. "ಸಧ್ಯ ಕರೆಂಟು ಹೋಯ್ತು ! ಈಗ ಎಲ್ಲರೂ ನನ್ನ ಮಾತಾಡಿಸುತ್ತಾರೆ !" ಎಂದಾಗ ಅಲ್ಲಿ ಒಂದು ಕ್ಷಣ ಮೌನ.

ಬುದ್ಧಿಯಿಲ್ಲದವನೊಂದಿಗೆ ಮಾತೇಕೆ ಎಂದು ಅವನನ್ನೊಬ್ಬನನ್ನೇ ಬಿಟ್ಟು ಮಿಕ್ಕವರೊಟ್ಟಿಗೆ ಮಾತಾಡುತ್ತಾ (?) ಅಥವಾ ಟಿವಿ ನೋಡುತ್ತಿದ್ದ ಅವರೆಲ್ಲಾ ಬುದ್ಧಿವಂತರೇ ? ಬುದ್ಧಿಯೊಂದು ಸ್ವಲ್ಪ ಕಡಿಮೆ ಚುರುಕು ಎಂದ ಮಾತ್ರಕ್ಕೆ ಮನುಷ್ಯನೊಬ್ಬನನ್ನ ಅಸಹನೀಯ ಏಕಾಂತಕ್ಕೆ, ಅಮಾನುಷ ಬಹಿಷ್ಕಾರಕ್ಕೆ ನೂಕುವುದು "ಸ್ಥಿತಪ್ರಜ್ಞ(?)" ಮನುಷ್ಯರ ಲಕ್ಷಣವೇ ? ಅಥವಾ ಅವರೊಡನೆ ಬರೀ ಅನುಕಂಪದ ಮಾತಾಡಿ ಅವರಿಗೆ ಮತ್ತು ಮನೆಯವರಿಗೆ ಮತ್ತಷ್ಟು ಜಿಗುಪ್ಸೆ ತರಿಸುವುದು ಮನುಷ್ಯತ್ವವೇ ? ಅವರಿಗೆ ಅನುಕಂಪಕ್ಕಿಂತ ಹೆಚ್ಚು ಪ್ರೋತ್ಸಾಹದ ಅವಶ್ಯಕತೆ ಇರತ್ತೆ. ಅವರು ಮಾತಾಡುವುದನ್ನು ನಾವು ಕೇಳಿಸಿಕೊಂಡರೇನೇ ಅವರಿಗೆ ಎಷ್ಟೋ ಖುಷಿಯಾಗತ್ತೆ, ಕಣ್ಣಲ್ಲಿ ಸಾವಿರ ಸೂರ್ಯರ ಬೆಳಕು ಕಾಣುತ್ತದೆ. ಅವರ ಮುಖದ ಮಂದಹಾಸ ಅವರನ್ನೂ ನಮ್ಮನ್ನೂ ಸಂತೋಷ ಪಡಿಸುತ್ತದೆ. ಅಲ್ಲವೇ ?

ಮಹಾನಗರದಲ್ಲಿ ಇಂದು ನಾವು ಯಾರದರೊಬ್ಬರ ಮನೆಗೆ ಭೇಟಿ ಕೊಡಬೇಕಾದರೆ ಶನಿವಾರ ಭಾನುವಾರಗಳು ಬರುವ ವರೆಗೂ ಕಾಯಬೇಕು. ಒಂದು-ನಮಗೆ ಆಗ ಹೆಚ್ಚು ಬಿಡುವು. ಎರಡು-ವಾರದ ದಿನಗಳಲ್ಲಿ ನಮಗೆ ಬಿಡುವುದ್ದರೂ ನಾವು ಹೋಗುವ ಮನೆಯವರಿಗೆ ಬಿಡುವಿರೊಲ್ಲ; ಕಾರಣ- ಮೆಗಾ ಸೀರಿಯಲ್ಲುಗಳು !! ಸೊಸೆ ಅತ್ತೆಯನ್ನು ಸಾಯಿಸಿದಳೇ ? ಇವಳು ಹದಿನಾಲ್ಕನೇ ಬಾರಿ ಮದುವೆಯಾದಳೇ ? ನಾವು ಕಳೆದ ಜನ್ಮದಲ್ಲೂ ಮನುಷ್ಯರಾಗಿದ್ದೆವೆ ? ನಮ್ಮ ನಕ್ಷತ್ರಕ್ಕೆ ಶನಿ ಕಾಟವಿದೆಯೇ ? ಇವೆಲ್ಲಾ ಯೋಚನೆಗಳ ಮಧ್ಯೆ ಅತಿಥಿ ಸತ್ಕಾರಕ್ಕೆ ಬಿಡುವೆಲ್ಲಿ ? ನಮ್ಮನ್ನು ಕಣ್ಣಲ್ಲಿ ಒಳಗೆ ಕರೆದು ಕೈಸನ್ನೆ ಮಾಡಿ ಕೂರಿಸಿ, ಸೀರಿಯಲ್ ನಲ್ಲಿ ಬ್ರೇಕ್ ಬಂದಾಗ ಮಾತಾಡಿಸುವವರನ್ನು ಏನನ್ನೋಣ ? ಮೂರ್ಖರ ಪೆಟ್ಟಿಗೆ ನಮ್ಮನ್ನು ಎಷ್ಟು ಮೂರ್ಖರನ್ನಾಗಿಸಿದೆ ಅನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ?

ಭಾವನೆಗಳ ಅತಿರೇಕಗಳಿರುವ ಮಾಯಾಪರದೆಯ ಮುಂದೆ ಅನಗತ್ಯವಾಗಿ ಭಾವನೆಗಳ ಮಹಾಪೂರವನ್ನು ಹರಿಸುವ ನಾವು, ನಿಜವಾಗಲೂ ಭಾವನೆಗಳನ್ನು ವ್ಯಕ್ತಪಡಿಸುವ ಅವಶ್ಯಕತೆಯಿರುವಾಗ ನಿರ್ಭಾವುಕವಾಗಿ, ವ್ಯಾವಾಹಾರಿಕವಾಗಿ , ಬಹಳಷ್ಟು ಬಾರಿ ಅಮಾನುಷವಾಗಿ ವರ್ತಿಸುತ್ತೇವಲ್ಲಾ...ನಾವೇಕೆ ಹೀಗೆ ?

Sunday, November 22, 2009

ಸಂಸಾರ.....ವ್ಯಾಧಿ.....

ನಾನು ಅಧ್ಯಾಪಕಿಯಾದ ಮೇಲೆ ಮಕ್ಕಳಿಗೆ ಪರೀಕ್ಷೆಗಳನ್ನು ಕೊಟ್ಟೂ ಕೊಟ್ಟೂ ಅಭ್ಯಾಸ ಆಗಿ, ಈ ಬಾರಿ ನಿಮಗೂ ಪರೀಕ್ಷೆ ಕೊಡೋಣ ಅಂತ ಅನಿಸುತ್ತಿದೆ :) ಸಿಲಬಸ್ಸು ಏನು ,ಒಂದು ವಾಕ್ಯದ, ಐದು ವಾಕ್ಯದ ಪ್ರಶ್ನೋತ್ತರ ಇರುತ್ತದೆಯೇ ಅಂತೆಲ್ಲಾ ಹೆದರಬೇಡಿ. ಜಾಸ್ತಿ ಕಷ್ಟ ಏನು ಇಲ್ಲ. ನಾನು ಕೇಳೋದು ಎರಡೇ ಪ್ರಶ್ನೆಗಳು. ಮೊದಲ ಪ್ರಶ್ನೆ ಹೀಗಿದೆ-

ಖಾಲಿ ಬಿಟ್ಟ ಸ್ಥಳಗಳನ್ನು ತುಂಬಿರಿ- ಸಂಸಾರ........ವ್ಯಾಧಿ..........

ಸಿಕ್ಕಾಪಟ್ಟೆ ಸುಲಭದ ಪ್ರಶ್ನೆ ಅಂತೆಲ್ಲಾ ಹಿಗ್ಗಬೇಡಿ. ಪ್ರಶ್ನೆ ಇನ್ನು ಮುಗಿದಿಲ್ಲ. ನಾನು ಈಗ ಎರಡು ಘಟನೆಗಳನ್ನು ವಿವರಿಸುತ್ತೇನೆ. ಈ ಎರಡೂ ಘಟನೆಗಳ ಆಧಾರದ ಮೇಲೆ ನೀವು ಎರಡೂ ಸ್ಥಳಗಳನ್ನು ತುಂಬಬೇಕು. ಪರೀಕ್ಷೆಯ ನಿಯಮಗಳು ಇಂತಿವೆ.

ಒಂದೇ ಸ್ಥಳ ತುಂಬಿದರೆ ನಪಾಸು.ಕನಿಷ್ಟ/ಗರಿಷ್ಟ ಅಂಕಗಳೆಲ್ಲಾ ಇಲ್ಲ. ಎರಡೇ ದರ್ಜೆಗಳು - ಉತ್ತೀರ್ಣ/ಅನುತ್ತೀರ್ಣ.

ಈಗ ಎರಡು ಘಟನೆಗಳನ್ನು ವಿವರಿಸುತ್ತೇನೆ. ಗಮನವಿಟ್ಟು ಓದಿ.

ಘಟನೆ ೧:

ಎಚ್ ೧ ಎನ್ ೧ ಎಲ್ಲಾ ಪೇಪರಿನ ಹೆಡ್ಲೈನ್ ಆಗಿದ್ದ ಸಮಯ. ಚಿಕುನ್ ಗುನ್ಯಾ ಕೂಡಾ ತನ್ನ ಅಟ್ಟಹಾಸ ಮೆರೆಯುತ್ತಿತ್ತು. ಜ್ವರವಿಲ್ಲದವರೂ ಜ್ವರ ಬಂದವರಂತೆ ಆಡುತ್ತಿದ್ದರು. ಜ್ವರ ಬಂದವರು ಪ್ರಾಣದ ಮೇಲಿನ ಆಸೆ ಕಳೆದುಕೊಳ್ಳುತ್ತಿದ್ದರು. ಆಸ್ಪತ್ರೆಗಳು, ಲ್ಯಾಬ್ ಗಳು ರೋಗಿಗಳು ಮತ್ತು ಟೆಸ್ಟ್ ಮಾಡಿಸಿಕೊಳ್ಳುವವರಿಂದ ಕಿಕ್ಕಿರಿದಿತ್ತು. ನಾನು ಕಾಲೇಜಿಗೆ ಸೇರಿದ ಹೊಸದು. ವಿದ್ಯಾರ್ಥಿಗಳೂ ಮಾಸ್ಕು, ನಾವೂ ಮಾಸ್ಕು ! ಎಲ್ಲರೂ ನಮ್ಮನಮ್ಮ ಎಚ್ಚರದಲ್ಲಿದ್ದೆವು.

ಒಂದು ದಿನ ನಮ್ಮ ಸಂಬಂಧಿಕರೊಬ್ಬರಿಗೆ ಹುಷಾರಿಲ್ಲ ಅನ್ನುವುದು ಗೊತ್ತಾಯ್ತು.ನಮ್ಮ ತಂದೆ ತಾಯಿ ಅವರನ್ನು ನೋಡಿಕೊಂಡು ಬರಲು ಹೊರಟಿದ್ದರು. ದಾರಿಯಲ್ಲಿ ನಾನು ಸಿಕ್ಕೆ ಆದ್ದರಿಂದ ನಾನೂ ಅವರೊಟ್ಟಿಗೆ ಹೋದೆ.ಹೋದ ತಕ್ಷಣ ಅವರ ಕುಶಲ ವಿಚಾರಿಸಿ, ಇವೆಲ್ಲಾ ಯಾವಾಗ ಹೇಗಾಯ್ತು ಅಂತ ಕೇಳಲು ಅವರು ಎರಡು ವಾರಗಳಿಂದ ಹೀಗೆ ನರಳುತ್ತಿರುವುದಾಗಿ ಹೇಳಿದರು. ನಾವು ನಮಗೆ ಹೇಳಿದ್ದಿದ್ದರೆ ಅವರ ಊಟ ತಿಂಡಿ ವ್ಯವಸ್ಥೆ ಮಾಡಬಹುದಿತ್ತಲ್ಲಾ ಎಂದು ಹೇಳಿದೆವು. ನಿಮಗೇಕೆ ತೊಂದರೆ ಎಂದು ಅವರು ಹೇಳಿದರಾದರು ಅದು ನಮಗೆ ಖಂಡಿತಾ ತೊಂದರೆ ಆಗುತ್ತಿರಲಿಲ್ಲ. ಇವರು ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿಕೊಂಡು " ವೈರಲ್ ಇನ್ ಫೆಕ್ಷನ್ " ಎಂದಷ್ಟೇ ಹೇಳಿದರೂ ಅದು ಚಿಕುನ್ ಗುನ್ಯಾ ನೇ ಅಂತ ನೋಡಿದೊಡನೆ ಗೊತ್ತಗುತ್ತಿತ್ತು. ಇವರೂ ಯಾರಿಗೂ ಹೇಳದೇ ನರಳಿದ್ದಕ್ಕೆ ಅವರ ಮಕ್ಕಳೂ ಕೂಡಾ ಹಾಸಿಗೆ ಹಿಡಿದಿದ್ದರು. ಕಾಲೇಜುಗಳಿಗೆ ಅನಿವಾರ್ಯವಾಗಿ ರಜೆ ಹಾಕಿ, ಲ್ಯಾಬ್ ಮಿಸ್ಸ್ ಆಗಿದ್ದಕ್ಕೆ ನನ್ನ ಹತ್ತಿರ ಅಳಲು ತೋಡಿಕೊಂಡರು ಅವರ ಮಕ್ಕಳು. ಒಂದು ಮಾತು ನಮಗಾಗಲಿ, ಇನ್ಯಾರಿಗಾದರೂ ಹೇಳಿದ್ದಲ್ಲಿ ನಾವು ಅವರನ್ನು ಮನೆಗೆ ಕರೆಸಿಕೊಂಡು ರೋಗ ಹರಡುವುದನ್ನು ತಪ್ಪಿಸಬಹುದಿತ್ತು. ಬೇಕಿಲ್ಲದ ಕಡೆ ಸಂಕೋಚ ದಾಕ್ಷಿಣ್ಯ ತೋರಿಸಿ, ಕಡೆಗೆ ಜ್ವರ relapse ಆಗಿ ಇವರು ನಾವು ಹೋದಾಗ ಒದ್ದಾಡುತ್ತಿದ್ದರು. ರೋಗ ಬಂದಾಗ ಮುಚ್ಚಿಟ್ಟು ಅವರು ಅದೇನು ಸಾಧಿಸಿದರೋ, ಚಿಕುನ್ ಗುನ್ಯಾ ಅಂದಾಕ್ಷಣ ನಾವು ಅವರನ್ನು ಎಲ್ಲಿ ಬಹಿಷ್ಕರಿಸುತ್ತೇವೋ ಅಂತ ಹೆದರಿದರೋ ಗೊತ್ತಿಲ್ಲ.

ಇದು ಭಾರತದಲ್ಲಿ.

ಎಚ್೧ಎನ್೧ ಅನ್ನು ತಡೆಗಟ್ಟಲು ಲಂಡನ್ ನಗರಿ ಹೇಗೆ ಸಜ್ಜಾಗಬೇಕೆಂದು ಬ್ರಿಟನ್ ಸರ್ಕಾರ ಆಜ್ಞೆ ಮಾಡಿತು ಅನ್ನೋದನ್ನ ನೋಡೋಣ.ಪ್ರತಿಯೊಬ್ಬ ಎಚ್೧ಎನ್೧ ಪೀಡಿತ ಪ್ರಜೆಯೂ ತಮ್ಮ ಅತಿ ನಂಬಿಕಸ್ಥ ಮಿತ್ರನನ್ನ "flu friend" ಅಂತ ಗುರುತಿಸಬೇಕು. ಅವರ ಇತ್ಯೋಪರಿಯೆಲ್ಲಾ ಸರ್ಕಾರಕ್ಕೆ ತಿಳಿಸಬೇಕು.ರೋಗಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು. ಔಷಧಿಗಳನ್ನು ಈ ಮಿತ್ರನಿಗೆ ಫೋನಿಸಿ ಹೇಳತಕ್ಕದ್ದು. ಈ flu friend ಔಷಧಾಲಯಕ್ಕೆ ಹೋಗಿ ಔಷಧ ತಂದು ಮನೆಯ ಮೈಲ್ ಬಾಕ್ಸ್ ಗೆ ಹಾಕತಕ್ಕದ್ದು.ಆ ಮಿತ್ರನಿಗೂ ರೋಗ ಹರಡದಂತೆ ಆಯ್ತು. ರೋಗಿಗಳ ಓಡಾಟದಿಂದ ರೋಗ ಹರಡುವುದು ತಪ್ಪಿತು !

ಘಟನೆ ೨ :

ಸುವರ್ಣ ಚಾನೆಲ್ ನಲ್ಲಿ " ಇದು ಕಥೆಯಲ್ಲ ಜೀವನ" ಅಂತ ಒಂದು ರಿಯಾಲಿಟಿ ಶೋ ಪ್ರಾರಂಭವಾಯ್ತು. ಮಿಕ್ಕಿದ್ದೆಲ್ಲಾ ಚಾನೆಲ್ ಗಳೂ ಜಟಕಾಬಂಡಿ, ಕಥೆ ಕಾದಂಬರಿ ಅಂತೆಲ್ಲಾ ಶುರುಹಚ್ಚಿಕೊಂಡವು. ಗಂಡ ಹೆಂಡಿರ ವಿರಸ, ರಂಪ ರಾದ್ಧಾಂತ, ಅನೈತಿಕ ಸಂಬಂಧಗಳು,ಕೋರ್ಟಿನ ವ್ಯಾಜ್ಯಗಳು, ಅಣ್ಣ ತಮ್ಮಂದಿರ ಆಸ್ತಿ ಜಗಳ ಮುಂತಾದವು ಎಲ್ಲರಿಗೂ ಗೊತ್ತಾಗುತ್ತಾ ಹೋದವು. ಅತ್ತೆ ತನ್ನ ಸ್ವಂತ ಸೊಸೆಗೇ ಇಲ್ಲಿ ಕಾಟಕೊಡುತ್ತಿದ್ದರೂ, ಟಿವಿಯಲ್ಲಿ ಶೋ ನೋಡುತ್ತಾ, " ಎಂಥಾ ಕ್ರೂರ ಅತ್ತೆ ! " ಎಂದು ಉದ್ಗರಿಸುತ್ತಿರುತ್ತಾರೆ. ಸೊಸೆ ತನ್ನ ಅತ್ತೆಯನ್ನೇ ಮನೆಯಿಂದ ಆಚೆಗೆ ಅಟ್ಟಿದ್ದರೂ, " ಎಂಥಾ ಅನ್ಯಾಯ" ಎಂದು ನಿರಾಶ್ರಿತ ಅತ್ತೆಗೆ ಮರುಗುತ್ತಿರುತ್ತಾರೆ. ಹಾಗಂತ ಅವರ ಬುದ್ಧಿಗೆ ತಾವು ಸುಧಾರಿಸಬೇಕು ಎಂದು ಹೊಳೆಯುತ್ತದೋ ಬಿಡುತ್ತದೋ ಅದು ಅವರವರ ಸಂಸ್ಕಾರಕ್ಕೆ ಬಿಟ್ಟಿದ್ದು. ಈ ರಿಯಾಲಿಟಿ ಶೋಗಳು ಸಮಸ್ಯೆಯನ್ನು ನೈಜವಾಗಿ ಬಿಂಬಿಸಿದರೂ ಅದಕ್ಕೆ ದೊರಕುವ ಪರಿಹಾರ ಮಾತ್ರ ನಾಟಕೀಯ. The problem is real, but the solution is just realistic. ಜನರ ಅಭಿಪ್ರಾಯವನ್ನೇ ನ್ಯಾಯ ಎಂದು ಪರಿಗಣಿಸುವುದಾಗಲೀ, ಎಸ್ ಎಮ್ ಎಸ್ಸುಗಳ ಮಹಾಪೂರ ಹರಿಸುವುದಾಗಲಿ ಸರಿಯೆಂದು ವೈಯಕ್ತಿವಾಗಿ ನನಗನ್ನಿಸುವುದಿಲ್ಲ.ಕೆಲವು ಕಡೆ ಮುಖವನ್ನು ಮರೆಮಾಡಿ ಶೋ ನಡೆಸಲಾಗುತ್ತೆ. ಈ ಪುರುಷಾರ್ಥಕ್ಕೆ ಅವರು ಟಿವಿ ಮುಂದೆ ಯಾಕೆ ? ಅವರವರೇ ಲಾಯರ್ ಬಳಿ ಮಾತಾಡಿ ಬಗೆಹರಿಸಿಕೊಳ್ಳಬಹುದಲ್ಲ, ತಮ್ಮ ಮುಖದ ಮೇಲಿನ ಹಾಗೂ ಮನಸ್ಸಿನೊಳಗಿನ ಪರದೆಯನ್ನು ಕಳಚಿ ! ಟಿವಿಯ ಆಚೆಗಿನ ಪ್ರಪಂಚದಲ್ಲಿ ಮಾಡಬಹುದಾದದ್ದನ್ನ ಮಾಡದೇ ಟಿವಿಯಲ್ಲಿ ನೋಡಿ ಸಮಸ್ಯೆಗೆ ಪರಿಹಾರ ಹುಡುಕುವುದು ಕನ್ನಡಿಯೊಳಗಿನ ಗಂಟನ್ನು ಹಿಡಿಯಲು ಹೋದಂತೆ. ಟಿವಿಯ ಟಿ ಆರ್ ಪಿ ದಾಹಕ್ಕೆ ನಾವು ಶೋಗಳನ್ನು ನೋಡುತ್ತಾ ಹೇಗೆ ಹಾಳಾಗುತ್ತಿದ್ದೇವೆ ಅಂತ ನಾನು ವಿವರಿಸಬೇಕಿಲ್ಲ.

ಈ ಎರಡೂ ಘಟನೆಗಳನ್ನು ಓದಿದಿರಲ್ಲಾ, ಈಗ ಖಾಲಿ ಬಿಟ್ಟ ಸ್ಥಳ ತುಂಬಿರಿ !

ಇನ್ನೊಂದು - ಪ್ರತಿ ಪೋಸ್ಟಿನ ಕಡೆಗೂ ನಾನು ಕೇಳುವ ಪ್ರಶ್ನೆ ಏನೂ ಅಂತ ಗೊತ್ತಲ್ಲಾ, ಅದೂ ಏನೆಂದು ಬರೆಯಿರಿ ! :)

Saturday, October 10, 2009

ಕಾಲದ ಬಂಡಿಯಲ್ಲಿ ನಾವು ಎಷ್ಟು ಮುಂದೆ ಸಾಗಿದ್ದೇವೆ ?

ಪ್ರಪಂಚದಲ್ಲಿ ನಾಗರಿಕತೆ ಆರಂಭವಾಗಿದ್ದು ಸಾವಿರಾರು ವರ್ಷಗಳ ಹಿಂದೆ.ಪ್ರಾಣಿಗಳಿಗಿಂತ ನಾವು ವಿಕಾಸಪಥದಲ್ಲಿ ಮುಂದೆ ಸಾಗತೊಡಗಿದ್ದೆವು. ಕಾಲಚಕ್ರದ ವೇಗದ ಗತಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳತೊಡಗಿದೆವು.ಪ್ರಾಣಿಗಳಿಗಿಂತ ಚೆನ್ನಾಗಿ ಯೋಚಿಸಿ ಅವನ್ನು ವ್ಯಕ್ತಪಡಿಸಬಲ್ಲ, ಕಾರ್ಯಗತಗೊಳಿಸಬಲ್ಲ ನಮ್ಮ ಸಾಮರ್ಥ್ಯ ನಾಗರಿಕತೆಗಳಿಗೆ ನಾಂದಿ ಹಾಡಿತು. ನಾಗರಿಕತೆಯಿಂದ ಸಮಾಜ ಬೆಳೆಯಿತು,ಸಮಾಜದಲ್ಲಿ ರೀತಿ, ನೀತಿ, ಆಚಾರ, ವಿಚಾರ, ಸಂಪ್ರದಾಯ ಸಂಸ್ಕೃತಿಗಳು ಮೇಳೈಸತೊಡಗಿದವು. ಕಾನೂನು, ದಂಡ ಸಂಹಿತೆ, ನೀತಿ ಸಂಹಿತೆ, ಧರ್ಮಶಾಸ್ತ್ರಗಳ ಪುಸ್ತಕಗಳೂ ಸಹ ಬರೆಯಲ್ಪಟ್ಟು, ಅದರಂತೆ ಜನ ನಡೆದುಕೊಳ್ಳುತ್ತಲೂ ಇದ್ದರು...ದಂಗೆಗಳು ಏಳುವವರೆಗೂ.ದಂಗೆ ಚಾರಿತ್ರಿಕವಾಗಿ ಎಷ್ಟು ಮಹತ್ವದ್ದೋ ಅಷ್ಟೇ ನಮ್ಮ ಮಾನಸಿಕ ವಿಕಾಸಪಥದಲ್ಲಿಯೂ ಒಂದು ಬಹುದೊಡ್ಡ ಘಟ್ಟ. ಮನಸ್ಸು, ಬುದ್ಧಿ ಎರಡನ್ನೂ ಉಪಯೋಗಿಸಿ ಇಂಥದ್ದು ಸರಿ ಇಲ್ಲ, ನಮಗೆ ಇದರ ಅವಶ್ಯಕತೆ ಇದೆ,ಇದು ಬೇಕು, ಇದು ಬೇಡ, ಇಂಥದ್ದಕ್ಕೆಲ್ಲಾ ಜನತೆ ಗಮನ ಹರಿಸತೊಡಗಿತು. ವಿಜ್ಞಾನ ತಂತ್ರಜ್ಞಾನಗಳಲ್ಲಿಯೂ ಪ್ರಗತಿಗಳಾದವು. ಸರಿ ತಪ್ಪುಗಳ ಪುನರ್ವಿಮರ್ಶೆ, ಪುನರ್ವಿಂಗಡನೆಗಳಾದವು. ಕಾಲದ ಗಾಲಿಯಲ್ಲಿ ಸಿಲುಕಿ ಈಗ ಭಾವನೆಗಳು ಮತ್ತು ಬಹುಕಾಲ ಸತ್ಯವಾಗಿದ್ದ ಕೆಲ ನಂಬಿಕೆಗಳು ಪುನರ್ವಿಮರ್ಶಾಯೋಗ್ಯವಾಗಿದೆ.

ಭಾವನೆಗಳಲ್ಲಿ ಕೋಟ್ಯಂತರ ವಿಧಗಳಿವೆ. ನಾವು ಗೆಳೆತನದ ಬಗ್ಗೆ ಗಮನ ಹರಿಸೋಣ. ಗೆಳೆತನ ಹುಡುಗರಲ್ಲಿ, ಹುಡುಗಿಯರಲ್ಲಿ ಗುಂಪಾಗಿ ಸಾಮಾನ್ಯ. ಹುಡುಗ ಮತ್ತು ಹುಡುಗಿಯ ನಡುವೆ ಕೇವಲ ಗೆಳೆತನ ಅಪರೂಪದ ಸಂಗತಿ. Confucius ಎಂಬ ಸಂತ ಪುಣ್ಯಾತ್ಮ "There can be no other emotional relationship between a man and a woman other than love" ಎಂದು ಅಪ್ಪಣೆ ಕೊಡಿಸಿದುದರ ಪರಿಣಾಮ ಹುಡುಗ ಹುಡುಗಿಯರು ಜೊತೆಯಾದರೆಂದರೆ ಬಾಳೆ ಎಲೆ ಊಟಕ್ಕೆ ದಿನ ಎಣಿಸಬಹುದೆನ್ನುವುದು ಲೋಕರೂಢಿಯಾಯ್ತು. ಇಂದೂ ಹಾಗೆಯೇ ಇದೆ.ಈ ನಂಬಿಕೆಯನ್ನು ಬುಡಸಮೇತ ಯಾರೂ ಕಿತ್ತೂ ಹಾಕಲಿಲ್ಲ, ನೈಜ ಗೆಳೆತನ ಹೆಚ್ಚು ಕಾಲ ಉಳಿಯಲೂ ಇಲ್ಲ. ಯಾಕೋ, ಯಾರೂ ದಂಗೆಯೂ ಏಳಲಿಲ್ಲ. Confucious ದಯೆ, ಬಾಲಿವುಡ್ಡು ಇಂದು ಈ ರೀತಿ ಇದೆ. ಅಂತೆಯೇ ಬಹುತೇಕ ಜನರ ಕಲ್ಪನೆ, ಭಾವನೆ, ನಂಬಿಕೆಗಳೂ !

ಹಿಂದೆಲ್ಲಾ ಅಕ್ಕಪಕ್ಕದಮನೆಯವರು ಒಟ್ಟಿಗೆ ಸೇರಿ ಆಟ ಆಡುತ್ತಿದ್ದರು. ನಾನೂ ಆಡಿದ್ದೆ. ನಾವು ಹುಡುಗಿಯರು ಇನ್ನೂ ಸಿಕ್ಕಾಗ ಮಾತಾಡುತ್ತೇವೆ. ಹುಡುಗರನ್ನೆಲ್ಲ ಮಾತಾಡಿಸುವುದು ಕಷ್ಟ. ಕನ್ಫ್ಯೂಷಿಯಸ್ ಕೃಪೆ !

ಕಾಲದ ಗಾಲಿ ಮುಂದೆ ಓಡಿದೆ. ಈಗ ಮಕ್ಕಳೆಲ್ಲಾ ಮನೆಯಲ್ಲಿ ಪ್ಲೇ ಸ್ಟೇಷನ್ ಆಡುವುದರಲ್ಲಿ ನಿರತರಾಗಿರುತ್ತಾರೆ ಆದ್ದರಿಂದ ಅವರಿಗೆ ಅಕ್ಕಪಕ್ಕದ ಮನೆಯವರ ಅವರ ವಾರಿಗೆಯ ಹುಡುಗರ ಅರಿವಿಲ್ಲ. ಹುಡುಗಿಯರ ಮೇಲೆ ಕಣ್ಣಿಟ್ಟಿರುತ್ತಾರೆ ಅನ್ನೋ ಭಯಕ್ಕೆ ತಂದೆ ತಾಯಿಗಳೂ ಈಗಿನಿಂದಲೇ ಎಚ್ಚರ ವಹಿಸುತ್ತಾರಾದ್ದರಿಂದ ಅವರಿಗೆ ಪ್ಲೇ ಸ್ಟೇಷನ್ನಿನ ಹುಡುಗಿಯರೇ ಗತಿ. ಸ್ಕೂಲುಗಳಲ್ಲೇ ಲವ್ ಸ್ಟೋರಿಗಳು ಬೆಳೆಯುವುದು ಬಾಲಿವುಡ್ಡಿನ ದೊಡ್ಡ ಸಾಮಾಜಿಕ ಕೊಡುಗೆ. ಪೀಳಿಗೆಗಳು ಮುಂದೆ ಸಾಗಿವೆ, ಈ ಭಾವನೆ, ಕಲ್ಪನೆಗಳೂ ಬಲಿತಿವೆ.

ಮನೆಯ ಮುಂದಿನ ಹರಟೆ ಕಟ್ಟೆಗಳು ಈಗ social networking sites ಗಳಾಗಿ ರೂಪಾಂತರಗೊಂಡು ಬ್ಲಾಗ್ ಎಂಬ ಹೊಸ ವೇದಿಕೆಯೊಂದು ಹರಟೆಗೆ ಸೃಷ್ಟಿಯಾಗಿದೆ. ನೈಜ ಪ್ರಪಂಚದಲ್ಲಿ ಮಾಡಲು ಸಾಧ್ಯವಿಲ್ಲದಿರುವ ಕೆಲವು ಅದ್ಭುತ (?) ಕೆಲಸಗಳನ್ನು ಆರ್ಕುಟ್, ಫೇಸ್ ಬುಕ್ನಲ್ಲಿ ಮಾಡಬಹುದಾಗಿದೆ. ಅದೇನೆಂದರೆ, ನಾವು "ನಾವು" ಎಂದು ಹೇಳಿಕೊಳ್ಳದೇ ಇನ್ಯಾರ ತರಹವೋ ಬಿಂಬಿಸಿಕೊಳ್ಳುವುದು. ಕನ್ನಡಿಯ ಮೇಲಿನ ಬಿಂಬ ನೈಜ ಬಿಂಬವಲ್ಲ ಹೇಗೋ, ಈ ಪ್ರೊಫೈಲುಗಳೂ ಬಹುಪಾಲು ನೈಜವಲ್ಲ. ಮನಸ್ಸು ಮಾಯಾಪೀಡಿತವಾಗಿರುವುದರಿಂದ ನಾವು ನಮಗೆ ಗೊತ್ತಿರುವ ಪ್ರೊಫೈಲಿನ ಜನರನ್ನು ( ಪ್ರಾಣಿಗಳು ಇನ್ನೂ ತಮ್ಮ ಪ್ರೊಫೈಲುಗಳನ್ನು ಮಾಡಿಕೊಂಡಿರುವ ಬಗ್ಗೆ ವರದಿ ಬಂದಿಲ್ಲ ಆದ್ದರಿಂದ ಜನ ಎಂದು ಧೈರ್ಯವಾಗಿ ಹೇಳುತ್ತೇನೆ !) ನಮ್ಮವರೆಂದೇ ನಂಬಿ, ಗೆಳೆತನ ಮಾಡಿ ಕೆಟ್ಟಿದ್ದೇವೆಯೇ ಹೊರತು ಮೋಸಗಳು ಬಯಲಾದಾಗ ಅದರ ವಿರುದ್ಧ ದಂಗೆ ಎದ್ದವರು ಕೋಟಿಗೊಬ್ಬರು. ನಂಬಿಕೆಗಳ, ಭಾವನೆಗಳ, ಸಂಬಂಧಗಳ ವ್ಯಾಖ್ಯಾನಗಳೇ ತಲೆಕೆಳಗಾದಾಗ ನಮಗಾದ ಆಘಾತವನ್ನು ಅರಿಯದೇ " ಎಲ್ಲಾ ಮಾಯೆ ! " ಅಂತ ವೇದಾಂತವನ್ನು, "virtual world ನಲ್ಲಿ ಇದೆಲ್ಲಾ ಕಾಮನ್ನು, ಸುಮ್ನೆ ತಲೆ ಕೆಡಿಸಿಕೊಳ್ತಾರೆ ಜನ ! they don’t know how to move on in life" ಅನ್ನೋ "practical" ಜನರು ತಮ್ಮ ತಮ್ಮ ಕ್ಲೀಷೆಯ ವಾದವನ್ನು ಮುಂದುವರೆಸಿದರೆ, ಹುಡುಗರೆಂದು ಮೋಸ ಹೋಗಿ ಕಡೆಗೆ ಅದೇನಾದರೂ ಹುಡುಗಿಯ ಪ್ರೊಫೈಲ್ ಆಗಿದ್ದರೆ ಹುಡುಗರು ಕನ್ ಫ್ಯೂಷಿಯಸ್ ಮಹಿಮೆಯಿಂದ confuse ಆಗುತ್ತಾರೆ. ಹುಡುಗಿಯ ಪ್ರೊಫೈಲೆಂದು ಮೊದಲು ಗೆಳೆತನ ಬೆಳೆಸಿದ್ದರೆ, ಅದು ಮುಂದೆ ಹೋಗಿರತ್ತೋ ಬಿಡತ್ತೋ, ಮೋಸವನ್ನು ಬಯಲಿಗೆಳೆಯುವ ವಿಷಯದಲ್ಲಿ ಅಡಕತ್ತರಿಯಲ್ಲಿ ಸಿಕ್ಕಿಬೀಳುತ್ತಾರೆ. ಪ್ರತಿಭಟನೆ ಮಾಡಲು ಬುದ್ಧಿ ಹೇಳತ್ತೆ , ಅವರ ಮೋಸ ಬಯಲಿಗೆಳೆಯಲು ಪುರಾವೆಯೂ ಇರತ್ತೆ, ಆದರೆ ಅದನ್ನು ತಪ್ಪೆಂದು ವಾದಿಸುವ ಜನರನ್ನು ಎದುರಿಸಲು ಬೇಕಾಗಿರುವ ಧೈರ್ಯದ ದಾಸ್ತಾನು ಮಾತ್ರ ಖಾಲಿಯಾಗಿರತ್ತೆ. ಇದು ಯಾರ ತಪ್ಪೂ ಅಲ್ಲ. ಧೈರ್ಯ ಖಾಲಿಯಾಗಲು ಕಾರಣ ಅದೇ ಕನ್ ಫ್ಯೂಷಿಯಸ್ ಮಹಿಮೆ. ಭಾವನೆಗಳ ಬಗ್ಗೆ ಕೇಳುವವರಿಲ್ಲ, ಅದು ಸ್ನೇಹದ್ದಾಗಿರಲಿ, ಪ್ರೀತಿಯದ್ದಾಗಿರಲಿ. ಆದ ಅನ್ಯಾಯದ ವಿರುದ್ಧ ದನಿ ಎತ್ತಿದವರೆಷ್ಟು ಜನ ?

ಇನ್ನು ಇನ್ನೊಂದು ವಿಧದ ಗೆಳೆತನಕ್ಕೆ ಬರೋಣ. ಹುಡುಗಿಯೆಂದು ಸಹಜ ಸಖ್ಯ ಬೆಳೆಸಿಕೊಂಡೂ ಅದೇನಾದರೂ ಹುಡುಗನ ಪ್ರೊಫೈಲ್ ಆಗಿದ್ದರೆ ಅದೂ ಸಹ ಆಘಾತಕಾರಿಯಾಗಿರುತ್ತದೆ.ಇಲ್ಲೂ confusion ಮತ್ತು Confucius ರಾರಾಜಿಸುತ್ತಾರೆ ಆದ್ದರಿಂದ ಪ್ರತಿಭಟನೆ ದೂರವಾಗಿಯೇ ಉಳಿಯುತ್ತದೆ. ಸ್ನೇಹದಲ್ಲಿ ಸತ್ಯಕ್ಕೆ ಬೆಲೆಕೊಡದವರ ಬಗ್ಗೆ ತಿರಸ್ಕಾರ ಹುಟ್ಟಿದರೆ, ಸಖ್ಯದಲ್ಲಿ ವಿನಿಮಯಗೊಂಡ ಕೆಲವು ವಿಷಯಗಳು ಎಲ್ಲಿ ಅಪಾಯಕಾರಿ ಕೈ ಸೇರಿಬಿಟ್ಟವೋ ಅನ್ನುವ ಹೆದರಿಕೆ ನಮ್ಮನ್ನು ಮುಕ್ಕಾಲು ಸಾಯಿಸಿಯೇಬಿಟ್ಟಿರುತ್ತವೆ !

ಕಾಲದ ಬಂಡಿ ಏರಿ ಕಟ್ಟೆ ಬಿಟ್ಟು ನಾವು ಕೀಬೋರ್ಡನ್ನು ಕುಟ್ಟುವಷ್ಟು ಮುಂದೆ ಸಾಗಿದರೂ ಸರಿ ತಪ್ಪನ್ನು ಖಂಡಿಸುವಷ್ಟು , ಮುಕ್ತವಾಗಿ ಪ್ರತಿಭಟನೆ ಮಾಡುವಷ್ಟು ಮುಂದೆ ಬಂದಿಲ್ಲ. ಯಾಕಂದರೆ, ವರ್ಷಾನುಗಟ್ಟಲೆಯ ಹಿಂದಿನ ಅಪ್ಪಣೆಯನ್ನೇ , "ಅಯ್ಯೋ ನಮಗೆ ಯಾಕೆ ಬೇಕು ಇವೆಲ್ಲ ? " ಅನ್ನುವ ಧೋರಣೆಯನ್ನೇ ನಾವು ಬಿಟ್ಟಿಲ್ಲವಲ್ಲ ! ಆರ್ಕುಟ್ ಮದುವೆಗಳ ಬಗ್ಗೆ ನನ್ನ ಅಸಮ್ಮತಿಯಾಗಲಿ, ಆಕ್ಷೇಪಣೆಯಾಗಲಿ ಖಂಡಿತಾ ಇಲ್ಲ. ಅದನ್ನು ಪ್ರಗತಿಯೆಂದೇ ಪರಿಗಣಿಸೋಣ. ಆದರೆ ಪ್ರತಿಯೊಂದು ಸಂಬಂಧಕ್ಕೂ ಸ್ನೇಹವೇ ಮೊದಲ ಮೆಟ್ಟಿಲಾಗಿರುವುದರಿಂದ ಸ್ನೇಹಿತರಾಗಲು ಈಗ ನಾವು ಹಲವಾರು ದೃಷ್ಟಿಕೋನಗಳಲ್ಲಿ ನೂರಾರು ಬಾರಿ ಯೋಚಿಸಬೇಕಾಗತ್ತೆ. ಸಭ್ಯತೆ ಕೂಡಾ ಮುಖ್ಯವಾತ್ತೆ. ನಾನು ನನ್ನ ಆರ್ಕುಟ್ ಪ್ರೊಫೈಲ್ ನಲ್ಲಿ " please do not send friend request if we do not know each other" ಅಂತ ಹಾಕಿದ್ದಕ್ಕೆ ನನ್ನೆಲ್ಲಾ ಮಿತ್ರರು ನಕ್ಕಿದ್ದರು. ಆದರೆ ನಾನು ಆರ್ಕುಟ್ ನಲ್ಲಿ ಹಲವಾರು ಬಾರಿ ನಡೆಯುವ ಮೋಸಗಳಿಂದ ನೊಂದು ಅತ್ತ ನನ್ನ ಸ್ನೇಹಿತೆಯರ ತರಹ ಅಳಲು ಸಿದ್ಧಳಿರಲಿಲ್ಲ. ಅಷ್ಟೇ.

ಬದಲಾವಣೆ ಜಗದ ನಿಯಮವಾದರೂ, "ಬದಲಾವಣೆ ಜಗದ ನಿಯಮ" ಅನ್ನುವ ನಿಯಮಕ್ಕೆ ಬದಲಾವಣೆಯಿಲ್ಲ ! ಇನ್ನೊಂದು ಬದಲಾಗದ ನಿಯಮ Confucius ನ ನಿಯಮ ಆಗುವುದನ್ನ ನಾವು ತಡೆಯಬೇಕಿದೆ. ಭಾವನೆಯ ಈ ಕಟ್ಟಲೆಯನ್ನು ನಾವು ಇಂದು ವಿಮರ್ಶೆಗೆ ಒಳಪಕಿಡಿಸಬೇಕಿದೆ. ಭಾವನೆಗೆ ಆದ ಪೆಟ್ಟನ್ನು ಸರಿಪಡಿಸಲು ನಾವು ಹೋರಾಡಲೇಬೇಕಿದೆ. ನಾಗಾಲೋಟದಲ್ಲಿ ಪ್ರಗತಿ ಹೊಂದುತ್ತಿರುವ ತಂತ್ರಜ್ಞಾನ ಕುಮತಿಗಳ, ಭಾವನಾಶೂನ್ಯರಾದ, ಕಾರ್ಯವಾಸಿ ಮಾನವರ ವಿಕಾಸಕ್ಕೆ ಎಡೆ ಮಾಡಿಕೊಡದಿರಲಿ ಎನ್ನುವುದಷ್ಟೇ ನನ್ನ ಆಶಯ. ಸ್ನೇಹಕ್ಕೆ ನಂಬಿಕೆಯ ಭದ್ರ ಅಡಿಪಾಯದೊಂದಿಗೆ ಸಭ್ಯತೆಯ ಚೌಕಟ್ಟಿನ ಅವಶ್ಯಕತೆಯಿದೆ.

ಅಕ್ಟೋಬರ್ ಹದಿನಾರು ೨೦೦೯ ರಂದು ನಾವೇಕೆ ಹೀಗೆ ಪ್ರಾರಂಭವಾಗಿ ಎರಡು ವರ್ಷ ಆಗಿದ್ದನ್ನು ಆಚರಣೆ ಮಾಡಬೇಕು ಅಂತ ನನಗೆ ಅನ್ನಿಸಲಿಲ್ಲ. ಈ ಬಾರಿ ನಾವೇಕೆ ಹೀಗೆ ಅಂತ ಕೇಳೋದಿಲ್ಲ.


Thursday, September 3, 2009

ಗೌರಿ ಬಾಗಿನ- ನಾ ನ ನ ನಾ ನಾ? ?

ಈ ಸರ್ತಿ ಗೌರಿ ಮತ್ತು ಗಣೇಶ ಸಿಕ್ಕಾಪಟ್ಟೆ ಬ್ಯುಸಿ ಇದ್ದ ಹಾಗೆ ಕಂಡರು. ಇಬ್ಬರೂ ಒಂದೇ ದಿನ ಧರೆಗೆ ಬಂದಿದ್ದರು ! ಅಲ್ಲದೇ ಭಾನುವಾರವೇ ಬಂದಿದ್ದರು, ಎಲ್ಲರಿಗೂ ಅನುಕೂಲವಾಗಲಿ ಅಂತ ! ಇರಲಿ, ಜೈ ಗೌರಿ ಗಣೇಶ !

ಗೌರಿ ಗಣಪತಿ ಹಬ್ಬ ಹಿಂದೆ ಸಾಂಪ್ರದಾಯಿಕವಾಗಿತ್ತು, ಆಮೇಲೆ ಸಾಮಾಜಿಕವಾಯ್ತು. ಈಗ ಅಪ್ಪಟ ವ್ಯಾವಾಹಾರಿಕವಾಗಿದೆ . ಗೌರಿ ಹಬ್ಬದಲ್ಲಿ ಒಬ್ಬಟ್ಟಿಗೆ ಮೊದಲು ಪ್ರಾಮುಖ್ಯತೆ ಇದ್ದರೆ ಎರಡನೆಯದು ಗೌರಿ ಬಾಗಿನಕ್ಕೆ. ಎಲ್ಲ ಧಾನ್ಯಗಳು, ತೆಂಗಿನಕಾಯಿ, ಹಣ್ಣುಗಳು, ಮತ್ತು ಉಡುಗೊರೆಗಳನ್ನು ಬಿದಿರಿನ ಮೊರಗಳಲ್ಲಿ ನೀಡುವ ಸಂಪ್ರದಾಯವಿದೆ. ಇದರ ಉದ್ದೇಶ ಇಷ್ಟೇ. ಸಕಲ ಧಾನ್ಯಗಳನ್ನು ಕೊಡುವ ಉದ್ದೇಶ ಸ್ವಯಂಪಾಕ. ದೇವಿಗೆ ನಾವು ಸಮರ್ಪಿಸುವ ಮಹಾನೈವೇದ್ಯದ ಜೊತೆಗೆ ಇದನ್ನೂ ಕೊಡುವ ಉದ್ದೇಶ ಅವಳಿಗೆ ಇನ್ನೇನು ಏನು ಸ್ವೀಕರಿಸಲು ಇಚ್ಛೆ ಇದ್ದರೆ ಅದೂ ಸಹ ಧಾನ್ಯಗಳ ಮೂಲರೂಪದಲ್ಲಿ ನೆರವೇರಲಿ ಅಂತ. ಅವಳು ಸಂತೃಪ್ತಳಾಗಿ ನಮ್ಮನ್ನು ಹರಸಲಿ ಅಂತ.

ಈಗ ಬಾಗಿನದ ಸಾಮಾಜಿಕ ಔಚಿತ್ಯದ ವಿಷಯಕ್ಕೆ ಬರೋಣ. ಹಿಂದಿನ ಕಾಲದಲ್ಲಿ ಧಾನ್ಯಗಳ ಕಟಾವು, ಸುಗ್ಗಿ, ಎಲ್ಲ ವೈಭವೋಪೇತವಾಗಿ ಆಚರಿಸಲ್ಪಡುತ್ತಿದ್ದವು. ತಮ್ಮ ಗದ್ದೆಯಲ್ಲಿ ಬೆಳೆದ ಧಾನ್ಯಗಳ ಗುಣಮಟ್ಟ ಹೇಗಿದೆ ಅನ್ನುವುದನ್ನ ಬೇರೆಯವರು ಸವಿದು ಹೇಳುವುದು ಉಚಿತವೆಂದು ಭಾವಿಸಿ, ಹಬ್ಬದ ನೆಪ ಮಾಡಿ, ಧಾನ್ಯದ ವಿನಿಮಯ ಮಾಡಲಾಗುತ್ತದೆ. ಆಗ ಸೇರುಗಳಲ್ಲಿ ನೀಡಲಾಗುತ್ತಿತ್ತು, ಈಗ ಅದು ಚಟಾಕಿಗಿಂತ ಕಡಿಮೆಗೆ ಇಳಿದಿದೆ, ಕಾಲಾಯ ತಸ್ಮೈ ನಮಃ. ಅಕ್ಕ ತಂಗಿಯರಿಗೆ, ಮಿತ್ರವರ್ಗಕ್ಕೆ ಬಾಗಿನದ ಜೊತೆ ಉಡುಗೊರೆಗಳನ್ನು ಕೊಡಲಾಗುತ್ತಿತ್ತಾದ್ದರಿಂದ ಬಾಂಧವ್ಯ ಇನ್ನೂ ಹೆಚ್ಚುತ್ತಿತ್ತು, ಮತ್ತಷ್ಟು ಬೆಳೆಯುತ್ತಿತ್ತು.

ಈಗ ಬಾಗಿನದ ವ್ಯಾವಾಹಾರಿಕತೆಗೆ ಬರೋಣ. ಬಾಗಿನ ಕೊಡುವುದು ಈಗ ಕೇವಲ ಕಾಟಾಚಾರ ಆಗಿಹೋಗಿದೆ. ಕೆಲವರಿಗೆ ಅದು "ಹೊರೆ" ಅನ್ನಿಸಿಬಿಟ್ಟಿದೆ. ಹತ್ತು ಸಾವಿರಕ್ಕಿಂತ ಒಂದು ರುಪಾಯಿಯೂ ಕಡಿಮೆ ಇರದ ಸೀರೆ ಕೊಳ್ಳಲು ಮುಖ ಮುಲಾಜು ನೋಡದ ಅವರು, ಐದು ಜನರಿಗೆ ಬಾಗಿನ ನೀಡಲು ಬೇಕಾಗುವ ಅರ್ಧ ಕೇಜಿ ಅಕ್ಕಿ ಕೊಳ್ಳಲು ಸಾವಿರ ಸರ್ತಿ ಯೋಚನೆ ಮಾಡುತ್ತಾರೆ. ಬಾಗಿನದ ಮೊರಗಳನ್ನು ಮಾರುವವರ ಬಳಿ ಗಂಟಾನುಗಟ್ಟಲೆ ಜಗಳಕ್ಕೆ ನಿಲ್ಲಲು ತಯಾರಿರುತ್ತಾರೆ. ಮಾತಾಡಿದ್ದೂ ಆಡಿದ್ದೇ - " ಎಲ್ಲರಲ್ಲೂ ದೇವರಿರುತ್ತಾರೆ, ಅವರಿಗೆ ನಮಸ್ಕಾರ ಮಾಡಬೇಕು, ಬೇರೆಯವರಿಗೆ ದಾನ ಕೊಡುವಾಗ ಖರ್ಚಿನ ಮುಖ ನೋಡಬಾರದು" ಹಾಗೆ ಹೀಗೆ. ಆದರೆ ಬಾಗಿನ ಕೊಡುವ ಇಂತಹ ಹಬ್ಬ ಬಂದಾಗ " ನಮ್ಮನೆಯಲ್ಲಿ ಬಾಗಿನ ಕೊಡುವ ಸಂಪ್ರದಾಯ ಇಲ್ಲ, ಬರಿ ಬಾಗಿನ ತೆಗೆದುಕೊಳ್ಳುವ ಸಂಪ್ರದಾಯ ಇದೆ ! " ಮತ್ತು " ಹಬ್ಬದ ಖರ್ಚು ಹೆಚ್ಚಲ್ಲವೇ ? (?) ಬಾಗಿನ ಎಲ್ಲ ಯಾರು ಕೊಡುತ್ತಾರೆ ? ಸದ್ಯ ಪೂಜೆ ಮಾಡಿ ಊಟವಾದರೆ ಸಾಕಾಗಿದೆ ! " ಇವೇ ಮುಂತಾದ ಆಣಿ ಮುತ್ತುಗಳು ಸಾರಾಸಗಟಾಗಿ ಕೇಳಸಿಗುತ್ತವೆ. ಮತ್ತೆ ಕೆಲವರು ಬಾಗಿನ ಕೊಡುತ್ತಾರೆ- ಹುಳು ಬಂದ ಅಕ್ಕಿ, ತೂತಾದ ಬೇಳೆ ಕಾಳು ! ಈ ಪುರುಷಾರ್ಥಕ್ಕೆ ಬಾಗಿನ ಕೊಡಬೇಕ್ಯಾಕೆ ? "ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮೊಳಹಾಕಿದರು" ಅಂತ ಬೈದುಕೊಳ್ಳಬೇಡಿ ನೀವೆಲ್ಲರೂ, ಆದರೆ ವಿಷಯದ ಸೂಕ್ಷ್ಮವನ್ನು ಗಮನಿಸಿ. ಬಾಗಿನ ಕೊಡುವುದು ಏಕೆ ? ಬಾಗಿನ ತೆಗೆದುಕೊಂಡವರು ನಮ್ಮನ್ನು ಆಶೀರ್ವದಿಸಿ ಹರಸಲಿ ಅಂತಲ್ಲವೇ ? ನಮ್ಮ ಆಶೀರ್ವಾದ ಫಲಿಸುವುದು ಎಷ್ಟು ನಿಜವೋ, ಹುಳು ತುಂಬಿದ ಅಕ್ಕಿ ಬೇಳೆ ನೋಡಿದ ತಕ್ಷಣ ಬರುವ ನಿಟ್ಟುಸಿರು ಫಲಿಸುವುದೂ ಅಷ್ಟೇ ನಿಜವಲ್ಲವೇ ? ನಾವು ಒಳ್ಳೆ ವಸ್ತುಗಳನ್ನು ಕೊಟ್ಟರೆ ನಮಗೆ ಒಳ್ಳೆಯದಾಗುತ್ತದೆ, ಕೆಟ್ಟದ್ದು ಕೊಟ್ಟರೆ ಕೆಟ್ಟದಾಗುತ್ತದೆ ಅನ್ನೋದು ಭೌತಶಾಸ್ತ್ರದ ಸಹಜ ನಿಯಮ ಅಲ್ಲವೇ ? ಭೌತಶಾಸ್ತ್ರದ ವಿಷಯ ಬದಿಗಿರಲಿ, ಅದು ಸಾಮಾನ್ಯ ಪ್ರಜ್ಞೆ ಅಲ್ಲವೇ ? ನಾವು ಕೆಟ್ಟ ವಸ್ತುಗಳನ್ನು ಕೊಡಬಹುದು, ಆದರೆ ನಮಗೆ ಮಾತ್ರ ಸದಾ ಒಳ್ಳೆಯ ವಸ್ತುಗಳೇ ಸಿಗಬೇಕು, ಒಳ್ಳೆಯದೇ ಆಗುತ್ತಿರಬೇಕು ಅಂತ ಬಯಸುವುದು ಮೂರ್ಖತನದ ಪರಮಾವಧಿಯಲ್ಲವೇ ?

ಇನ್ನು ಈಗಿನ ಕಾಲದ ನನ್ನ ಪುಟ್ಟ ತಂಗಿಯರು- ಅವರಿಗೆ ಬಾಗಿನ ಕೊಡೋದು ಬೋರ್ ಅಂತೆ, ಕ್ರಿಸ್ಮಸ್ ಸಮಯದಲ್ಲಿ ಸೀಕ್ರೆಟ್ ಏಂಜೆಲ್ ಗಳಾಗಿ ಅವರ ಮಿತ್ರರಿಗೆ ಮತ್ತು ಅಕ್ಕ ತಂಗಿಯರಿಗೆ ಗಿಫ್ಟ್ ಕೊಡುವುದು ಥ್ರಿಲ್ಲ್ ಅಂತೆ ! ನಾನು ಕೇಳಿದೆ- "ಬಾಗಿನಕ್ಕೆ ಎರಡು ಮೊರಗಳಿರುತ್ತವೆ- ಬಾಗಿನವನ್ನು ಮುಚ್ಚಿ ಕೊಡಲಾಗುತ್ತೆ. ಅದನ್ನ ತೆಗೆದು ನೋಡಿದರೆ ಅದರಲ್ಲಿರುವ ಉಡುಗೊರೆ ನೋಡಿ ಥ್ರಿಲ್ ಆಗುತ್ತದೆ. ಮತ್ತು ಯಾರು ಬಾಗಿನ ಕೊಡಲು ಬರುತ್ತಾರೋ ಅವರು ಏಂಜಲ್ ಗಳಲ್ಲವೇ ? " ಇದಕ್ಕೆ ಉತ್ತರ- "Oh really ? " ಎಂಬ ಮತ್ತೊಂದು ಪ್ರಶ್ನೆ ! ನನ್ನ ತಂಗಿ ಮತ್ತು ನಾನು ನಮ್ಮ ಸ್ನೇಹಿತೆಯರು ಯಾರಿಗೂ ಬಾಗಿನ ಕೊಡದ ಕಾರಣ ಅವರಿಗೆ ಇಂತಹಾ "ಬಾಗಿನ ordeal (?!) " ಗಳಲ್ಲಿ ನಂಬಿಕೆ ಇಲ್ಲದಿರುವುದು. ನಾನು ನನ್ನ ತಂಗಿಗೆ, ಅವಳು ನನಗೆ ಬಾಗಿನ ಕೊಟ್ಟುಕೊಂಡು ಸುಮ್ಮನಾದೆವು.

ನಮ್ಮ ಆಚರಣೆಗಳ ಅರ್ಥ ತಾತ್ಪರ್ಯಗಳನ್ನು ಸರಿಯಾಗಿ ತಿಳಿದುಕೊಳ್ಳದೇ, ಅವುಗಳನ್ನು ನೆಟ್ಟಗೆ ಆಚರಿಸದೇ, ಇನ್ಯಾವುದೋ ಪದ್ಧತಿಯನ್ನೂ ಸಹ ಸರಿಯಾಗಿ ಅರ್ಥೈಸದೇ ಸುಮ್ಮನೆ ತೋರ್ಪಡಿಕೆಗಾಗಿ ಹಬ್ಬಗಳನ್ನು ಆಚರಿಸುತ್ತೀವಲ್ಲಾ...ನಾವೇಕೆ ಹೀಗೆ ?